ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಾಬ್ಧಿಯ ಸಂದರ್ಭದಲ್ಲಿ ಅವರ ಸ್ಮರಣೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೈಗೊಂಡಿರುವ ಹಲವು ಮಹತ್ವದ ನಿರ್ಧಾರಗಳನ್ನು ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರ್ ಸ್ವಾಗತಿಸಿದ್ದಾರೆ.
ರಾಮಕೃಷ್ಣ ಹೆಗಡೆ ಅವರು ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿದ ದೂರದೃಷ್ಟಿಯ ನಾಯಕರಾಗಿದ್ದರು. ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ತಳಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಹೆಗಡೆ ಅವರ ಜನ್ಮ ಶತಾಬ್ಧಿಯ ಅಂಗವಾಗಿ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಮುಖ್ಯರಸ್ತೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಕಟಿಸಿರುವುದು ಅರ್ಥಪೂರ್ಣ ನಿರ್ಧಾರವಾಗಿದೆ. ಇದು ಕೇವಲ ರಾಜಕೀಯ ನಾಯಕನ ಸ್ಮರಣೆಯನ್ನು ಉಳಿಸುವ ಕ್ರಮವಲ್ಲದೆ, ಅವರ ಸಾರ್ವಜನಿಕ ಜೀವನದ ಮೌಲ್ಯಗಳು ಮತ್ತು ಆಡಳಿತದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಗೌರವಪೂರ್ಣ ಪ್ರಯತ್ನವಾಗಿದೆ ಎಂದು ದೀಪಕ ಹೆಗಡೆ ದೊಡ್ಡೂರ್ ಹೇಳಿದ್ದಾರೆ.
ಪ್ರತಿವರ್ಷ ರಾಮಕೃಷ್ಣ ಹೆಗಡೆ ಅವರ ಜನ್ಮದಿನದಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಗ್ರಾಮ ಪಂಚಾಯತ್ಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಮುಖ್ಯಮಂತ್ರಿ ಅವರ ಘೋಷಣೆಯೂ ವಿಶೇಷವಾಗಿ ಶ್ಲಾಘನೀಯವಾಗಿದೆ. ಈ ಪ್ರಶಸ್ತಿ ವ್ಯವಸ್ಥೆಯು ಉತ್ತಮ ಸ್ಥಳೀಯ ಆಡಳಿತ, ಪಾರದರ್ಶಕತೆ, ಜನಪಾಲ್ಗೊಳ್ಳುವಿಕೆ, ಸಾಮಾಜಿಕ ನ್ಯಾಯ, ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಹಾಗೂ ಪರಿಣಾಮಕಾರಿ ಸೇವಾ ವಿತರಣೆಗೆ ಗ್ರಾಮ ಪಂಚಾಯತ್ಗಳನ್ನು ಉತ್ತೇಜಿಸುವಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಮಕೃಷ್ಣ ಹೆಗಡೆ ಅವರ ಶತಾಬ್ಧಿಯನ್ನು ಕೇವಲ ಸ್ಮರಣಾ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಅವರ ಆಡಳಿತದ ಮೌಲ್ಯಗಳನ್ನು ಸಂಸ್ಥೆಗಳ ಮೂಲಕ ಶಾಶ್ವತಗೊಳಿಸುವ ಪ್ರಯತ್ನ ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಿರ್ಧಾರ ಅಭಿನಂದನಾರ್ಹವಾಗಿದೆ. ಹೆಗಡೆ ಅವರ ಸ್ಮರಣೆಯನ್ನು ಗೌರವಪೂರ್ವಕವಾಗಿ ಶಾಶ್ವತಗೊಳಿಸುವ ಈ ಘೋಷಣೆಗಳಿಗಾಗಿ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ದೀಪಕ ಹೆಗಡೆ ದೊಡ್ಡೂರ್ ತಿಳಿಸಿದ್ದಾರೆ.
ಇದನ್ನೂ ಓದಿ / ಕತ್ತಗಾಲದಲ್ಲಿ ರಾಜಾರೋಷವಾಗಿ ಓಸಿ–ಮಟ್ಕಾ,.? ಶಿರಗುಂಜಿ, ಮಾಬ್ಗಿಯಲ್ಲೂ ಕೋಳಿ ಅಂಕ ಜಾಲ



